ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪುಟ ವಿಸ್ತರಣೆ : 24 ನೂತನ ಸಚಿವರ ಪ್ರಮಾಣವಚನ ಸ್ವೀಕಾರ | JANATA NEWS
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ರಚನೆಗೊಂಡ ಒಂದು ವಾರದ ಬಳಿಕ ಸಂಪುಟ ವಿಸ್ತರಣೆಯಾಗಿದ್ದು, ಇಂದು ಶನಿವಾರ(ಮೇ 27) ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ 24 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದರು. ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಸಚಿವರಿಗೆ ಪ್ರತಿಜ್ಞಾವಿಧಿಯನ್ನು ಬೋದಿಸಿದರು.
ಕಳೆದ ಶನಿವಾರ (ಮೇ 20) ಕಂಠೀರವ ಸ್ಟೇಡಿಯಂನಲ್ಲಿ 8 ಮಂದಿ ಸಚಿವರೊಂದಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು.
ಮಧು ಬಂಗಾರಪ್ಪ, ಎಚ್.ಕೆ ಪಾಟೀಲ್, ಈಶ್ವರ್ ಖಂಡ್ರೆ, ಮಂಕಾಳ ವೈದ್ಯ, ಶರಣಬಸಪ್ಪ ದರ್ಶನಾಪುರ, ತಿಮ್ಮಾಪೂರ್ ರಾಮಪ್ಪ ಬಾಲಪ್ಪ, ಎನ್.ಚಲುವನಾರಾಯಣ ಸ್ವಾಮಿ, ಕೆ. ವೆಂಕಟೇಶ್, ಎಸ್.ಎಸ್. ಮಲ್ಲಿಕಾರ್ಜುನ್, ಶಿವರಾಜ ತಂಗಡಗಿ, ಶರಣ ಪ್ರಕಾಶ್ ಪಾಟೀಲ್, ಡಿ. ಸುಧಾಕರ್, ಸಂತೋಷ್ ಲಾಡ್, ಎನ್.ಎಸ್. ಬೋಸೆರಾಜು, ಬೈರತಿ ಸುರೇಶ್, ಎಂ.ಸಿ. ಸುಧಾಕರ್ ಮತ್ತು ಬಿ.ನಾಗೇಂದ್ರ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.
ಇಂಗ್ಲಿಷ್ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ರಹೀಂ ಖಾನ್ ಅವರು ಅಲ್ಲಾ ಹೆಸರಿನಲ್ಲಿ, ಡಾ.ಎಚ್. ಸಿ. ಮಹಾದೇವಪ್ಪ ಅವರು ಸತ್ಯ ನಿಷ್ಠೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವೇನಿಸಿದೆ. ಶಿವಾನಂದ ಪಾಟೀಲ್ ಅವರು ಬಸವಣ್ಣನ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬಸವಣ್ಣ, ಶಿವಾಜಿ ಹಾಗೂ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಕೃಷ್ಣ ಭೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಅವರು ಯಾರ ಹೆಸರನ್ನೂ ಉಲ್ಲೇಖಸದೇ ಶ್ರದ್ಧಾಪೂರ್ವಕವಾಗಿ ದೃಢೀಕರಣ ಮಾಡುತ್ತೇನೆ ಎನ್ನುವ ಮೂಲಕ ಪ್ರಮಾಣ ವಚನ ಸ್ವೀಕರಿಸಿದ್ದಾರೆ.